“ಮಸಣದ” ಸಾಹಸ

೧೯೮೯ರಲ್ಲಿ ನನ್ನ ತಂದೆಯವರಿಗೆ ಬೆಂಗಳೂರಿನಿಂದ ಮೈಸೂರಿಗೆ ವರ್ಗಾವಣೆಯಾಯಿತು. ಆಗ ನಾನು ೩ನೇ ತರಗತಿಯಲ್ಲಿ ಓದುತ್ತಿದ್ದೆ. ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಒಂದು ಮನೆಯಲ್ಲಿ ಬಾಡಿಗೆಗೆ ಇದ್ದೆವು.ನಮಗೆ ಎಲ್ಲವೂ ಹೊಸದು. ಮೈಸೂರಿನ ಜನ, ಅವರ ಮಾತುಕತೆ, ಅವರ ನಡವಳಿಕೆ ಎಲ್ಲವೂ ನಮಗೆ ಒಂದು ರೀತಿ ಹೊಸದು. ಬಾರಿ “relaxed” ಮೈಸೂರಿನ ಜನರು.

ಗೋಕುಲಮ್ ಬಡಾವಣೆಯ ಕನ್ನಡ ನಮ್ಮ ಬೆಂಗಳೂರಿನ ಕನ್ನಡದಂತೆ ಇರಲಿಲ್ಲ. ಆ ಬಡಾವಣೆಯಲ್ಲಿನ ಕನ್ನಡವು ಒಂದು ರೀತಿಯ ಹಳ್ಳಿಯ ಕನ್ನಡದಂತಿತ್ತು. “ಏನ್ಲಾ?”, “ಬಾರ್ಲೇ ಮಗನೇ” ಇಂತಹ ಪದಗಳು ಹೆಚ್ಚಿಗೆ ಬಳಕೆಯಲ್ಲಿತ್ತು.

ನನಗೆ ಇಬ್ಬರು ಗೆಳತಿಯರ ಪರಿಚಯವಾಯಿತು. ಅವರಿಬ್ಬರೂ ಸುಮಾರು ನನ್ನ ವಯ್ಯಸ್ಸಿನವರೇ ಆಗಿದ್ದರು.
ನಮ್ಮ ಬಡಾವಣೆಯ ಎದುರಿಗೆ ಸ್ಮಶಾಣ ಒಂದಿತ್ತು. ಆ ಸ್ಮಶಾಣದ ಅಕ್ಕ ಪಕ್ಕ ಮರದ ತೋಪುಗಳು ಇದ್ದವು. ನಾನೂ ನನ್ನ ಹೊಸ ಗೆಳತಿಯರೂ ಆ “ಕಾಡಲ್ಲಿ” ಅಡ್ಡಾಡಿಕೊಂಡು ಬರುವುದೆಂದು ನಿಶ್ಚಯಿಸಿದೆವು. ನಮ್ಮ ನಮ್ಮ ಅಪ್ಪಅಮ್ಮಂದಿರಿಗೆ ಈ ವಿಷಯವನ್ನು ತಿಳಿಸುವುದು ಒಳ್ಳೆಯದಲ್ಲವೆಂದು ನಿರ್ಧರಿಸಿ ಒಂದು ಭಾನುವಾರ ನಮ್ಮ ಸಾಹಸಕ್ಕೆ ಇಳಿದೆವು.

ಆ ತೋಪನ್ನು ತಲುಪಿದಮೇಲೆ ನಮ್ಮ ಕಣ್ಣಿಗೆ ಬಿದ್ದದ್ದು ಸ್ಥಾಪನೆಯಾಗಿದ್ದ ಒಂದೆರಡು ಲಿಂಗಗಳು ಹಾಗು ತುಳಸಿಕಟ್ಟೆಗಳು. ತುಳಸಿಕಟ್ಟೆ ಇದ್ದಮೇಲೆ ಅಕ್ಕ ಪಕ್ಕ ಮನೆಗಳಿರಬೇಕಲ್ಲವೇ. ಹತ್ತಿರದಲ್ಲೆಲ್ಲೂ ಮನೆಗಳು ಕಾಣಲಿಲ್ಲ. ಹಾಗಿದ್ದರೆ ಲಿಂಗಗಳೂ, ತುಳಸಿಕಟ್ಟೆಗಳೂ ಅಲ್ಲಿ ಏಕಿವೆ ಎಂದು ನಮಗೆ ಅರ್ಥವಾಗಲಿಲ್ಲ. ಲಿಂಗಗಳನ್ನೂ, ತುಳಿಸಿಕಟ್ಟೆಗಳನ್ನೂ ಕಂಡಾಗ ಕೈಮುಗಿಯುವ ಸಂಪ್ರದಾಯ ನಮ್ಮದು ಅಲ್ಲವೆ? ನನ್ನ ಒಬ್ಬ ಗೆಳತಿಯು ಒಂದೆಡೆ ತುಂಬೇಹೂಗಳನ್ನು ಕಂಡಳು. ಸರಿ ಆ ಹೂಗಳನ್ನು ಕಿತ್ತು ಆ ಲಿಂಗಗಳಿಗೂ, ತುಳಸಿಕಟ್ಟೆಗಳಿಗೂ ನಮ್ಮ “ಪೂಜೆಯನ್ನು” ಅರ್ಪಿಸಿದೆವು.

ಅಲ್ಲಿಗೆ ಅಂದಿನ “exploration” ಮುಗಿಯಿತು. ಮತ್ತೊಂದು ಬಾರಿ ಕಾಡಿಗೆ ಬಂದು ಈ “exploration” ಮುಂದುವರಿಸುವುದೆಂದು ನಿಶ್ಚಯಿಸಿದೆವು.

ಸರಿ, ಮನೆಯನ್ನು ತಲುಪಿದ ಮೇಲೆ ನಮ್ಮ ಸಾಹಸವನ್ನೂ, ದೈವಭಕ್ತಿಯನ್ನೂ ನನ್ನ ಅಪ್ಪಅಮ್ಮನಿಗೆ ಹೇಳಿದಾಗ ನಮ್ಮಮ್ಮ “ಅಯ್ಯೊ!! ನೀವು ಪೂಜೆ ಮಾಡಿದ್ದು ತುಳಸಿಕಟ್ಟೆ ಹಾಗು ಲಿಂಗಗಳಿಗಲ್ಲ ತಾಯಿಂದಿರಾ, ಅವು ಗೋರಿಗಳು” ಎಂದು ಒಂದೇಸಮನೆ ನಗಲು ಶುರುಮಾಡಿದರು.

ನನಗೆ ಈ ಗೋರಿ ಎಂದರೇನು ಹಾಗು ಅವು ನೋಡುವುದಕ್ಕೆ ಹೇಗಿರುತ್ತವೆ ಎಂದು ಗೊತ್ತಿರಲಿಲ್ಲ. ಗೋರಿಗಳೇನೆಂದು
ನಮ್ಮಮ್ಮನಿಂದ ಅಂದು ತಿಳಿದ ಮೇಲೆ, ಅವುಗಳ ಮೇಲೆ ಲಿಂಗಗಳನ್ನು, ತುಳಸಿಕಟ್ಟೆಗಳನ್ನು ಏಕೆ ಕಟ್ಟಿರುತ್ತಾರೆಂದು ಅರ್ಥವಾಗಲಿಲ್ಲ.
ಪೇಟೆ ಹುಡುಗಿ ನಾನು, ಇವೆಲ್ಲ ಹೇಗೆ ಗೊತ್ತಿರಬೇಕು ಪಾಪ!

ಅಷ್ತೇ ಅಲ್ಲ, ಸ್ಮಶಾಣದಲ್ಲಿರಬೇಕಿದ್ದ ಗೋರಿಗಳು ಆ ಕಾಡಿನಲ್ಲಿ ಹೇಗೆ ಕಾಣಿಸಿಕೊಂಡವು ಎಂದು ಪ್ರಶ್ನೆ ಹಾಕಿದಾಗ, ಅದಕ್ಕೆ ನಮ್ಮಮ್ಮ ಸ್ಮಶಾನದಲ್ಲಿ ಜಾಗವಿಲ್ಲವೆಂದು ಅದನ್ನು ಕಾಡಿಗೆ “extend” ಮಾಡಿರಬೇಕೆಂದು ಹೇಳಿದರು. ಆವರ ಪ್ರಕಾರ ಇದು ಬಹಳ “common”.

ನನಗೆ ದೆವ್ವ, ಭೂತ, ಪ್ರೇತ, ಪಿಶಾಚಿಗಳ ಕಾಟದ ಬಗ್ಗೆಯ ಯೋಚನೆ ಶುರುವಾಯಿತು. ಪಾಪ, ಆಗ ನಾನಿನ್ನು ೩ನೆ ತರಗತಿಯಲ್ಲಿ ಓದುತಿದ್ದ ಹಸುಳೆ. ನನ್ನ ಹೆದರಿದ ಮುಖವನ್ನು ನೋಡಿದ ನನ್ನ ಅಮ್ಮ “ಹೋಗಲೀ ಬಿಡು, ನಿಮ್ಮ ಪೂಜೆಯ ಫಲದಿಂದ ಆ ಸತ್ತಿರುವ ಆತ್ಮಗಳಿಗೆ ಶಾಂತಿ ಸಿಗುತ್ತದೆ” ಎಂದು ನಗು ನಗುತ್ತಾ ಸಮಾಧಾನಿಸಿದರು.
ನನಗೆ ಮುಂದಿನ ಕೆಲವು ವರ್ಶಗಳ ತನಕ, ಈ ಬಾಧೆ ಕಾಡುತ್ತಲೇಯಿತ್ತು. ಆ ಆತ್ಮಗಳು ಪ್ರೀತಿಯಿಂದಲೇ ನಮ್ಮನ್ನು ಕಾಡಿಸಲು ಶುರುಮಾಡಿದರೆ????

ನನಗೆ ೨೫ ವರ್ಶಗಳಾದಮೇಲೂ ಆ ಆತ್ಮಗಳು ಕಾಡದಿದ್ದಾಗ, ದೆವ್ವ, ಭೂತ, ಪ್ರೇತ, ಪಿಶಾಚಿಗಳ ಮೇಲಿನ ನಂಬಿಕೆ ಪೂರ್ಣವಾಗಿ ಮಾಯವಾಯಿತು...

Comments

  1. ಭಾವನ;ಗೋರಿಗಳ ಬಗ್ಗೆ ನಿಮ್ಮ ಲೇಖನ ಚೆನ್ನಾಗಿತ್ತು.ನಾವು ಕೆಲ ಸ್ನೇಹಿತರು 1973 ರಲ್ಲಿ ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಹೀಗೇ ಗೊತ್ತು ಗುರಿಯಿಲ್ಲದ ಜಾಗದಲ್ಲಿ ಏಳೆಂಟು ಕಿಲೋಮೀಟರ್ ನಡೆದು ಹೋದಾಗ ಸುಮಾರು ನೂರು ವರ್ಷಗಳಷ್ಟು ಹಳೆಯ ಬ್ರಿಟೀಷರ ಗೋರಿಗಳು,ಅದರಮೇಲಿನ ಸತ್ತವರ ವಿವರಗಳು ನೀಡಿದ ವಿಶಿಷ್ಟ ಅನುಭವವ ಇನ್ನೂ ನೆನಪಿನಲ್ಲಿದೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ಧನ್ಯವಾದಗಳು ಕೃಷ್ಣ ಮೂರ್ತಿ ಅವರೇ..

    ReplyDelete
  3. ನಾವು ಮಾಡುವ ಧನಾತ್ಮಕ ಚಿ೦ತನೆಗಳಾಗಲೀ ಅಥವಾ ಕಾರ್ಯಗಳಾಗಲೀ ಯಾವತ್ತೂ ನಮ್ಮನ್ನು ಕಾಡುವುದಿಲ್ಲ/ಬಾಧಿಸುವುದಿಲ್ಲ, ಭಾವನಾ. ಅದರಿ೦ದ ಒಳ್ಳೆಯದೇ ಆಗಿರುತ್ತದೆ.“ಹೋಗಲೀ ಬಿಡು, ನಿಮ್ಮ ಪೂಜೆಯ ಫಲದಿಂದ ಆ ಸತ್ತಿರುವ ಆತ್ಮಗಳಿಗೆ ಶಾಂತಿ ಸಿಗುತ್ತದೆ”- ಅಮ್ಮ ಸರಿಯಾದ ಮಾತನ್ನೇ ಆಡಿದ್ದಾರೆ. ಆದರೆ ಋಣಾತ್ಕಕ ಚಿ೦ತನೆಗಳು/ಕಾರ್ಯಗಳು ನಮ್ಮಿ೦ದ ನಡೆದಿದ್ದರೆ ಅದರಿ೦ದ ಬಾಧಕಕ್ಕೊಳಗಾಗುತ್ತೇವೆ. ಉತ್ತಮ ವಿಚಾರವನ್ನು ಬ್ಲಾಗಿಸಿದಿರಿ. ಧನ್ಯವಾದಗಳು.

    ಅನ೦ತ್

    ReplyDelete
  4. I just started reading blogs. Yours is first one...and is good one.. hope you will keep writing.

    ReplyDelete

Post a Comment

Popular posts from this blog

Struggle to map her own world

Birthday cravings

Teenage Heartache? Or was it?? Part 2